ಹೈದ್ರಾಬಾದ್ ಸಂಸ್ಥಾನದಲ್ಲಿ ವಂದೇ ಮಾತರಂ ಚಳವಳಿ (1938-39)
ಡಾ. ಪಿ. ನಾಗಭೂಷಣಗೌಡ
ಭಾರತ ಸ್ವಾತಂತ್ರ್ಯ ಹೋರಾಟಕ್ಕಿಂತ ಭಿನ್ನವಾದ ಹೋರಾಟವನ್ನು ಕಂಡಿರುವ ಹೈದರಾಬಾದ್ ವಿಮೋಚನಾ ಸಂಗ್ರಾಮ, ಒಂದು ರೋಮಾಂಚಕಾರಿ ಕಥೆ. ಹೈದರಾಬಾದ ನಿಜಾಮನ ಆಡಳಿತದಿಂದ ಈ ಪ್ರದೇಶವನ್ನು ಮುಕ್ತಗೊಳಿಸಿ, ಜವಾಬ್ದಾರಿ ಸರಕಾರವನ್ನು ಸ್ಥಾಪಿಸಲು ಕಾಂಗ್ರೆಸ್, ಆರ್ಯ ಸಮಾಜ, ಸಿವಿಲ್ ಲಿಬರ್ಟೀಸ್ ಯೂನಿಯನ್ ಮುಂತಾದ ಸಂಘ-ಸಂಸ್ಥೆಗಳು ಹಲವಾರು ರೀತಿಯ ಉಗ್ರ ಹೋರಾಟ ನಡೆಸಬೇಕಾಯಿತು. ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆರಂಭಿಸಿದ ವಂದೇ ಮಾತರಂ ಚಳವಳಿಯು ಸಂಸ್ಥಾನದಲ್ಲಿಯ ರಾಜಕೀಯ ಜಾಗೃತಿಗೆ ಪ್ರೇರಕ ಶಕ್ತಿಯಾಗಿ ಹೊರಹೊಮ್ಮಿದ್ದನ್ನು ಕಾಣಬಹುದಾಗಿದೆ. ವಂದೇ ಮಾತರಂ ಚಳವಳಿಯು ಮುಂದೆ ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾಗಿ ರೂಪುಗೊಂಡ ಯುವ ನಾಯಕರನ್ನು ಸೃಷ್ಠಿ ಮಾಡಿತು. ವಂದೇ ಮಾತರಂ ಒಂದು ಗೀತೆ. ಬಂಕಿಮಚಂದ್ರ ಚಟರ್ಜಿಯವರು ತಮ್ಮ ಸುಪ್ರಸಿದ್ದ ಕಾದಂಬರಿ ‘ಆನಂದಮಠ’ದಲ್ಲಿ ಅಳವಡಿಸಿದ್ದ ಅತ್ಯಂತ ವಿವಾದಾತ್ಮಕ ಗೀತೆ ಈ ವಂದೇ ಮಾತರಂ. (ಈ ಹಾಡನ್ನು ಆಕಾಶವಾಣಿ ಪ್ರತಿನಿತ್ಯ ಬೆಳಿಗ್ಗೆ ತನ್ನ ಕಾರ್ಯಕ್ರಮಗಳನ್ನು ಈ ಗೀತೆಯೊಂದಿಗೆ ಆರಂಭಿಸುವುದನ್ನು ಕೇಳದವರು ಇಲ್ಲ) ಸಾಹಿತ್ಯಕವಾಗಿ ಅದನ್ನು ಬೆಂಗಾಲಿಯಿಂದ ಅನುವಾದಿಸಿದರೆ “ಹೇ ತಾಯೇ ನಿನಗೆ ನಮಿಸುವೆ (ವಂದಿಸುವೆ), ನಮನಗಳು” ಎಂದಾಗುತ್ತದೆ. ಅಂದರೆ ತಾಯಿನಾಡಿಗೆ ಸಲ್ಲಿಸುವ ಪ್ರಣಾಮಗಳು. ಈ ಹಾಡನ್ನು ಹಾಡುವ ಬಗ್ಗೆ ನಡೆದ ಗೊಂದಲವೊಂದು ಬೃಹದಾಕಾರವಾಗಿ ಬೆಳೆದು ರಾಜಕೀಯ ಜಾಗೃತಿಗೆ ನಾಂದಿಯಾಯಿತು.
ಡಾ. ಪಿ. ನಾಗಭೂಷಣಗೌಡ. ಹೈದ್ರಾಬಾದ್ ಸಂಸ್ಥಾನದಲ್ಲಿ ವಂದೇ ಮಾತರಂ ಚಳವಳಿ (1938-39). International Journal of Humanities and Social Science Research, Volume 2, Issue 8, 2016, Pages 83-87